ಅಶ್ವತ್ಥಮರ
From Wikipedia, the free encyclopedia
ಅಶ್ವತ್ಥಮರ (ಅರಳಿ) (Peepul Tree) ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ.ಇದು ದಕ್ಷಿಣ ಏಷಿಯಾದಲ್ಲಿ ವ್ಯಾಪಕವಾಗಿರುವ ಮರ. ಇದು ನೇಪಾಳ, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ, ನೈಋತ್ಯ ಚೀನಾ ಮತ್ತು ಇಂಡೋಚೈನಾ ಸ್ಥಳೀಯವಾದ ಅಂಜೂರದ ಒಂದು ಜಾತಿಯ ಮರ. ಇದು Moraceae, ಹಿಪ್ಪುನೇರಳೆ ಕುಟುಂಬಕ್ಕೆ ಸೇರಿದೆ. ಶ್ರೀಲಂಕಾದಲ್ಲಿ ಈ ಮರದ ಹೆಸರು Esathu ಆಗಿದೆ. ಇದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಭೋದಿವೃಕ್ಷ, ಪೀಪಲ್, ಅರಳಿ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಹೆಸರಿದೆ. ಈ ಮರದ ಕೆಳಗೆ ಕುಳಿತು ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂದು ಪ್ರತೀತಿ. ಭಾರತದ ಎಲ್ಲಾ ಕಡೆ ಬೆಳೆಯುವುದು. ಹಳ್ಳಿಗಳ ಅಶ್ವತ್ಥಕಟ್ಟೆಯಲ್ಲಿ ಬೆಳೆದು ಶೋಭಿಸುವ ಪವಿತ್ರ ಪೂಜಾ ವೃಕ್ಷ. ಚಕ್ರವರ್ತಿ ಅಶೋಕನ ಆಳ್ವಿಕೆಯ ಕಾಲದಲ್ಲಿ ದೇಶವನ್ನು ವ್ಯಾಪಕವಾಗಿ ನೆಟ್ಟು ಬೆಳೆಸಲಾಯಿತು. ನಮ್ಮ ದೇಶದಿಂದ ಶ್ರೀಲಂಕಾ ದೇಶಕ್ಕೆ ತೆಗೆದುಕೊಂಡು ಹೋಗಿ ಅನುರಾಧಪುರದಲ್ಲಿ ನೆಡಲಾಯಿತು. 2200 ವರ್ಷಗಳ ಹಿಂದೆ ಬೋಧ ಗಯಾದ ಬೋಧಿ ವೃಕ್ಷದ ಕೊಂಬೆಯಿದು. ಇದರ ಎಲೆಗಳು ವೀಳ್ಯದೆಲೆಯನ್ನು ಹೋಲುತ್ತದೆ. ಆದರೆ ತುದಿ ಚೂಪಾಗಿ ಉದ್ದವಾಗಿರುತ್ತದೆ. ಎಲೆಗಳು ಹೊಳಪಾಗಿದ್ದು, ನರಗಳು ಸ್ವಷ್ಟವಾಗಿ ಕಾಣುತ್ತವೆ. ಎಳೆ ಎಲೆಯ ಕುಡಿಗಳು ತಿಳಿಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ದೊಡ್ಡಮರ, ಕವಲುಗಳು ಅಗಲವಾಗಿ ಹರಡುತ್ತವೆ. ಕಾಯಿಗಳು ಹಸಿರಾಗಿದ್ದು, ಒಣಗಿದ ಮೇಲೆ ಕಂದು ವರ್ಣವನ್ನು ಹೊಂದುತ್ತವೆ. ಕಾಯಿಯ ತುಂಬ ಸಣ್ಣ ಸಣ್ಣ ಬೀಜಗಳಿರುತ್ತವೆ. ಈ ಕಾಯಿಗಳನ್ನು ಹಕ್ಕಿಪಕ್ಷಿಗಳು ತಿಂದು ತೃಪ್ತಿಪಡುತ್ತವೆ ಮತ್ತು ಬೀಜ ಪ್ರಸಾರದಲ್ಲಿ ನೆರವಾಗುತ್ತವೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |