ಗೂರ್ಖರು
From Wikipedia, the free encyclopedia
ಗೂರ್ಖರು ಎಂಬ ಪದವನ್ನು ನೇಪಾಲದ ರಾಜಮನೆತನಕ್ಕೆ ನಿರ್ದಿಷ್ಟಾರ್ಥದಲ್ಲೂ ನೇಪಾಲದ ನಿವಾಸಿಗಳಿಗೆ ವ್ಯಾಪಕಾರ್ಥದಲ್ಲೂ, ಬಳಸಲಾಗುತ್ತಿದೆ. ಅಲ್ಲಿಯ ರಾಜಮನೆತನದವರು ಭಾರತದ ಚಿತ್ತೂರಿನ ರಜಪುತ ದೊರೆಯ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ. 1303ರಲ್ಲಿ ಅಲ್ಲಾವುದ್ದೀನ ಈ ಕೋಟೆಯನ್ನು ಭೇದಿಸಿದಾಗ ಈ ದೊರೆ ತಾಯ್ನಾಡನ್ನು ತೊರೆದು ಉತ್ತರಕ್ಕೆ ಓಡಿ ಹೋದ. ಗೂರ್ಖ ಎಂಬ ಸಣ್ಣ ರಾಜ್ಯ ಇದ್ದದ್ದು ಸಪ್ತ ಗಂಡಕಿ ಪ್ರದೇಶದಲ್ಲಿ. ನೇಪಾಲದಲ್ಲಿ ಗೂರ್ಖ ಎಂಬ ಜಿಲ್ಲೆಯಿದೆ. ಅದರ ಮುಖ್ಯಸ್ಥಳದ ಹೆಸರೂ ಗೂರ್ಖ. ಈ ಹೆಸರು ಗೋರಖನಾಥ ಎಂಬ ಗುರುವಿನ ನಾಮಪ್ರತೀಕವಾಗಿ ಬಂದಿದ್ದೆಂದು ತಿಳಿದುಬರುತ್ತದೆ. ಗೂರ್ಖರು ಈ ಗುರುವನ್ನು ತಮ್ಮ ಕುಲದ ಗುರುವೆಂದು ಭಾವಿಸಿದ್ದಾರೆ. ಇಲ್ಲಿ ಪ್ರಸಿದ್ಧ ಭವಾನಿ ದೇವಾಲಯವಿದೆ. ಈ ಪ್ರದೇಶವನ್ನು 1559ರಲ್ಲಿ ಆಕ್ರಮಿಸಿಕೊಂಡು ಆಳಲು ತೊಡಗಿದ ದೊರೆಯ ವಂಶದವರು ತಮ್ಮ ಪ್ರಜೆಗಳನ್ನು ಗೂರ್ಖಾಲಿ ಎಂದು ಕರೆದರು. ಕ್ರಮೆಣ ಇಡೀ ನೇಪಾಲ ಈ ರಾಜರ ಅಧೀನಕ್ಕೆ ಬಂತು.