ಬೋಡೆನ್ ಸಂಸ್ಕೃತ ಪ್ರಾಧ್ಯಾಪಕ ಹುದ್ದೆ ಚುನಾವಣೆ, 1860
From Wikipedia, the free encyclopedia
1860 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಬೋಡೆನ್ ಪ್ರಾಧ್ಯಾಪಕ ಹುದ್ದೆಗೆ ನಡೆದ ಚುನಾವಣೆಯು ಸಂಸ್ಕೃತ ವಿದ್ಯಾರ್ಜನೆಗೆ ಬೇರೆಬೇರೆ ದಾರಿ ಕಂಡುಕೊಂಡ ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಾಗಿತ್ತು. ಆಕ್ಸ್ಫರ್ಡ್-ನಲ್ಲಿ ಓದಿದ್ದ ಆಂಗ್ಲ ಮೊನಿಯರ್ ವಿಲಿಯಮ್ಸ್ , 14 ವರ್ಷ ಈಸ್ಟ್ ಇಂಡಿಯಾ ಕಂಪನಿಗಾಗಿ ಭಾರತದಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿರುವ ಬ್ರಿಟಿಷರಿಗೆ ಸಂಸ್ಕೃತ ಕಲಿಸುತ್ತ ಕಳೆದಿದ್ದರು. ಜರ್ಮನ್ ಮೂಲದ ಮ್ಯಾಕ್ಸ್ ಮುಲ್ಲರ್, ಆಕ್ಸ್ಫರ್ಡ್ನಲ್ಲಿ ಭಾಷಾ ವಿಜ್ಞಾನದಲ್ಲಿ ಪರಿಣತಿ ಹೊಂದಿದ್ದ ಉಪನ್ಯಾಸಕರಾಗಿದ್ದರು . ಋಗ್ವೇದದ ಆವೃತ್ತಿಯ ಮೇಲೆ ಅವರ ಹಲವು ವರ್ಷಗಳ ಕೆಲಸ ಹಾಗೂ ಪಾಂಡಿತ್ಯಕ್ಕಾಗಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ವಿಲಿಯಮ್ಸ್ ನಂತರದ ಪಠ್ಯಗಳ ಮೇಲೆ ಕೆಲಸ ಮಾಡಿದ್ದವರು; ಮುಲ್ಲರರ "ಕಾಂಟಿನೆಂಟಲ್" [lower-alpha 1] ಸಂಸ್ಕೃತ ಶಾಲೆಗೆ ಅಷ್ಟು ಗಮನ ಕೊಟ್ಟಿರಲಿಲ್ಲ . ವಿಲಿಯಮ್ಸ್ ಸಂಸ್ಕೃತದ ಅಧ್ಯಯನವನ್ನು, ಭಾರತವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವುದಕ್ಕೆ ಒಂದು ಮಾರ್ಗ ಎಂದು ಪರಿಗಣಿಸಿದ್ದರಷ್ಟೆ. ಮುಲ್ಲರ್, ತಮ್ಮ ಕೆಲಸ ಮಿಷನರಿಗಳಿಗೆ ಸಹಾಯ ಮಾಡಿದ್ದಾಗ್ಯೂ, ಅದು ಸ್ವತಃ ಒಂದು ಅಂತ್ಯವಾಗಿ ಮೌಲ್ಯಯುತವಾಗಿದೆಯೆಂದು ನಂಬಿದ್ದರು.
1857 ರ ಭಾರತೀಯ ದಂಗೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಬ್ರಿಟನ್ನ ಪಾತ್ರದ ಬಗ್ಗೆ ಸಾರ್ವಜನಿಕ ಚರ್ಚೆ ಆಗುತ್ತಿದ್ದ ಸಮಯದಲ್ಲಿ ಈ ಚುನಾವಣೆ ಬಂದಿತ್ತು. ಭಾರತವನ್ನು ಪರಿವರ್ತಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆ ಅಥವಾ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂವೇದನಾಶೀಲವಾಗಿರಬೇಕೇ ಎಂಬ ಬಗ್ಗೆ ವಾದವಿವಾದ ನಡೆದಿತ್ತು. ಪ್ರಣಾಳಿಕೆಗಳು ಮತ್ತು ವೃತ್ತಪತ್ರಿಕೆ ಪತ್ರಗಳ ಮೂಲಕ ಇಬ್ಬರೂ 3,700 ಕ್ಕೂ ಹೆಚ್ಚು ಪದವೀಧರರ ಮತಗಳಿಗಾಗಿ ಹೋರಾಡಿದರು. ಕ್ರಿಶ್ಚಿಯನ್ ಧರ್ಮಗ್ರಂಥಗಳ ಪ್ರಸಾರದ ಮೂಲಕ ಭಾರತವನ್ನು ಪರಿವರ್ತಿಸಲು ಪ್ರಾಧ್ಯಾಪಕ ಸಹಾಯ ಮಾಡಬೇಕೆಂಬ ಪ್ರಾಧ್ಯಾಪಕ ಪೀಠದ ಮೂಲ ಸಂಸ್ಥಾಪಕರ ಉದ್ದೇಶದ ಮೇಲೆ ವಿಲಿಯಮ್ಸ್ ತನ್ನ ಅಭಿಯಾನದಲ್ಲಿ ಬಹಳ ಒತ್ತು ನೀಡಿದರು. ಋಗ್ವೇದದ ಕುರಿತಾದ ಕೆಲಸವು ಮಿಷನರಿಗಳಿಗೆ ಬಹೂಪಯುಕ್ತ ಎಂದು ಮುಲ್ಲರ್ ವಾದಿಸಿ ಪತ್ರಗಳನ್ನು ಪ್ರಕಟಿಸಿದರು. ಮಿಷನರಿಗಳು, ವಿದ್ವಾಂಸರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಭಾರತೀಯ ಇತಿಹಾಸ ಮತ್ತು ಸಾಹಿತ್ಯದಂತಹ ವ್ಯಾಪಕ ವಿಷಯಗಳನ್ನು ಕಲಿಸುವ ಅವರ ಪ್ರಸ್ತಾಪವನ್ನು ವಿಲಿಯಮ್ಸ್ , ಪೀಠದ ಮೂಲ ಸಂಸ್ಥಾಪಕರ ಇಚ್ಛೆಗೆ ಅನುಗುಣವಾಗಿಲ್ಲ ಎಂದು ಟೀಕಿಸಿದರು. ಪ್ರತಿಸ್ಪರ್ಧಿಗಳು ಪ್ರಚಾರದ ಅಂಗವಾಗಿ ವೃತ್ತಪತ್ರಿಕೆ ಜಾಹೀರಾತುಗಳನ್ನು ಮತ್ತು ಪ್ರಣಾಳಿಕೆಗಳನ್ನು ಪ್ರಕಟಿಸಿದರು ಮತ್ತು ಇಬ್ಬರನ್ನೂ ವಿವಿಧ ಪತ್ರಿಕೆಗಳು ಬೆಂಬಲಿಸಿದವು. ಪಾಂಡಿತ್ಯದಲ್ಲಿ ವಿಲಿಯಮ್ಸ್ಗಿಂತ ಶ್ರೇಷ್ಠರೆಂದು ಪರಿಗಣಿಸಲಾಗಿದ್ದರೂ, ಮುಲ್ಲರರ ಜರ್ಮನ್ ಮೂಲ ಮತ್ತು ಉದಾರವಾದಿ ಕ್ರಿಶ್ಚಿಯನ್ ಧೋರಣೆಗಳೆರಡೂ (ಕೆಲವರ ದೃಷ್ಟಿಯಲ್ಲಿ) ಅನನುಕೂಲತೆಗಳಾಗಿದ್ದವು. ಭಾರತವನ್ನು ಆಳುವ ಮತ್ತು ಪರಿವರ್ತಿಸುವ ಕೆಲಸಕ್ಕೆ ಸಹಾಯ ಮಾಡಲು ಇಂಗ್ಲಿಷರನ್ನೇ ಬೋಡೆನ್ ಪ್ರಾಧ್ಯಾಪಕರನ್ನಾಗಿ ನೇಮಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಒಳ್ಳೆಯದೆಂಬ ವಾದದ ಮೇಲೆ ಕೆಲವು ವೃತ್ತಪತ್ರಿಕೆಗಳು ವಿಲಿಯಮ್ಸ್ ಪರ ಬರೆದವು.
ದೂರದ ಸದಸ್ಯರಿಗೆ ಮತ ಚಲಾಯಿಸಲನುಕೂಲವಾಗುವಂತೆ ಆಕ್ಸ್ಫರ್ಡ್ಗೆ ವಿಶೇಷ ರೈಲುಗಳನ್ನು ಚುನಾವಣೆಯ ದಿನ, 7 ಡಿಸೆಂಬರ್ 1860 ರಂದು, ಒದಗಿಸಲಾಯಿತು. ಕಠಿಣ ಹೋರಾಟದ ಕೊನೆಯಲ್ಲಿ, ವಿಲಿಯಮ್ಸ್ 220 ಮತಗಳ ಬಹುಮತದಿಂದ ಗೆದ್ದರು. ನಂತರ, ಅವರು ಆಕ್ಸ್ಫರ್ಡ್ನಲ್ಲಿ ಭಾರತೀಯ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು, ನೈಟ್ಹುಡ್ ಪಡೆದರು ಮತ್ತು 1899 ರಲ್ಲಿ ಅವರ ಮರಣದ ತನಕ ಹುದ್ದೆ ಹೊಂದಿದ್ದರು. ಮುಲ್ಲರ್, ತನ್ನ ಸೋಲಿನಿಂದ ತೀವ್ರವಾಗಿ ನಿರಾಶೆಗೊಂಡಿದ್ದರೂ, ತನ್ನ ವೃತ್ತಿಜೀವನದ ಉಳಿದ ಅವಧಿಗೆ ಆಕ್ಸ್ಫರ್ಡ್ನಲ್ಲಿಯೇ ಇದ್ದರು, ಆದರೆ ಅಲ್ಲಿ ಸಂಸ್ಕೃತವನ್ನು ಕಲಿಸಲೇ ಇಲ್ಲ. 1860 ರದ್ದು ಕೊನೆಯ ಬೋಡೆನ್ ಪ್ರಾಧ್ಯಾಪಕ ಚುನಾವಣೆ; ಸಂಸತ್ ಸುಧಾರಣೆಗಳ ಪರಿಣಾಮವಾಗಿ 1882 ರಲ್ಲಿ ಚುನಾಯಿಸುವ ಅಧಿಕಾರ ತೆಗೆದುಹಾಕಲಾಯಿತು. ಈ ಪ್ರಾಧ್ಯಾಪಕತ್ವ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಈಗ ಯುನೈಟೆಡ್ ಕಿಂಗ್ಡಮ್ನಲ್ಲಿ ಉಳಿದಿರುವ ಕೊನೆಯ ಸಂಸ್ಕೃತ ಪ್ರಾಧ್ಯಾಪಕತ್ವವಾಗಿದೆ.