ಪ್ಲಾಸಿ ಕದನ
From Wikipedia, the free encyclopedia
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಂಗಾಳದ ನವಾಬ ಹಾಗೂ ಅವನ ಫ್ರೆಂಚ್ ಬೆಂಬಲಿಗರ ನಡುವೆ ಪ್ಲಾಸಿಯಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರು ಗೆದ್ದು ಮುಂದೆ ೧೯೦ ವರ್ಷಗಳ ಕಾಲ ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಡಿಪಾಯ ಹಾಕಿದರು. ೧೭೫೭ರ ೨೩ನೇ ಜೂನಿನಂದು ಪಶ್ಚಿಮ ಬಂಗಾಳದ, ಭಾಗೀರಥಿ ನದಿಯ ದಂಡೆಯ ಮೇಲಿರುವ, ಪ್ಲಾಸಿಯಲ್ಲಿ ಈ ಯುದ್ಧ ನಡೆಯಿತು.
ಈ ಯುದ್ಧದ ಒಂದು ಕಡೆ ಬಂಗಾಳದ ಕೊನೆಯ ಸ್ವತಂತ್ರ ನವಾಬ ಸಿರಾಜುದ್ದೌಲನೂ, ಇನ್ನೊಂದು ಕಡೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೂ ಇದ್ದವು. ಯೂರೋಪಿನಲ್ಲಿ ನಡೆದ ಏಳು ವರ್ಷದ ಯುದ್ಧ (೧೭೫೬-೬೩) ದ ಕಾಲದಲ್ಲಿಯೇ ಈ ಕದನ ಭಾರತದಲ್ಲಿ ನಡೆಯಿತು. ಯೂರೋಪಿನ ಲ್ಲಿಯ ವೈರದ ಪ್ರಭಾವದಿಂದ , ಫ್ರೆಂಚರು , ಭಾರತದ ಈ ಕದನದಲ್ಲಿ ಬ್ರಿಟಿಷ್ರ ವಿರುದ್ಧ ಹೋರಾಡಲು ಸಣ್ಣ ತುಕಡಿಯನ್ನು ಕಳುಹಿಸಿದರು. ಸಿರಾಜುದ್ದೌಲನ ಸೈನ್ಯ ಬ್ರಿಟಿಷರಿಗಿಂತ ಉತ್ತಮವಾಗಿದ್ದು, ಪ್ಲಾಸಿಯಲ್ಲಿ ಬೀಡುಬಿಟ್ಟಿತ್ತು. ಸೋಲಿನ ಸಂಭವದಿಂದ ಚಿಂತಿತರಾದ ಬ್ರಿಟಿಷರು ಸಿರಾಜುದ್ದೌಲನ ಪದಚ್ಯುತ ಸೇನಾಪತಿ ಮೀರ್ ಜಾಫರ್ ಮತ್ತು ಇಬ್ಬರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಆ ಸಂಚಿನ ಪ್ರಕಾರ ಮೀರ್ ಜಾಫರನು ತನ್ನ ಸೈನ್ಯವನ್ನು ಯುದ್ಧದ ಕಣದಲ್ಲಿ ಜಮಾಯಿಸಿದರೂ, ಯುದ್ಧದಲ್ಲಿ ಭಾಗವಹಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದರಿಂದ ಸಿರಾಜುದ್ದೌಲನ ಸೈನ್ಯ ಸೋಲನ್ನುಂಡಿತು. ತಲೆಮರೆಸಿಕೊಂಡ ಸಿರಾಜುದ್ದೌಲ ನನ್ನು ನಂತರ ಹಿಡಿದು ಕೊಲ್ಲಲಾಯಿತು. ಈ ಸೋಲಿನ ಪರಿಣಾಮವಾಗಿ ಬಂಗಾಳ ಸಂಪೂರ್ಣ ಬ್ರಿಟಿಷರ ವಶವಾಯಿತು. ಮೀರ್ ಜಾಫರ್ ಬ್ರಿಟಿಷರ ಕೈಗೊಂಬೆ ನವಾಬನೆಂದು ನೇಮಕಗೊಂಡನು.
ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಸ್ಥಾಪಿಸುವುದರಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಪ್ಲಾಸಿಯ ಯುದ್ಧವೂ ಒಂದು ಎಂದು ಇಂದು ಗುರುತಿಸಲಾಗಿದೆ. ಬಂಗಾಳದ ಬೊಕ್ಕಸದ ಅಪರಿಮಿತ ಸಂಪತ್ತು , ತುಂಬಿ ತುಳುಕುತ್ತಿದ್ದ ದವಸ ಧಾನ್ಯಗಳ ಆಗರ , ಮತ್ತು ವಿಪುಲ ಸುಂಕದ ಉತ್ಪತ್ತಿ ಇವುಗಳಿಂದ ಬ್ರಿಟಿಷರು ತಮ್ಮ ಸೈನ್ಯಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ಭಾರತದಲ್ಲಿ ಬೇರು ಬಿಡಲು ಬಹಳ ಸಹಾಯವಾಯಿತು. ಆದರೂ , ಹತ್ತು ವರ್ಷಗಳ ನಂತರದ ಬಕ್ಸಾರ್ ಕದನ ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಬಲವಾಗಿ ನೆಲೆಯೂರಲು ಅತಿ ನಿರ್ಣಾಯಕವಾಗಿತ್ತು.
ಪ್ಲಾಸಿ ಶಬ್ದ ಮೂಲ ಬಂಗಾಳಿ ಪಲಾಶಿ ( ಒಂದು ಹೂವಿನ ಹೆಸರು)ಯಿಂದ ಬಂದಿದೆ.