ಶ್ರೀ. ನಾರಾಯಣ ಗುರು
ಭಾರತೀಯ ಸಾಮಾಜಿಕ ಸುಧಾರಕ / From Wikipedia, the free encyclopedia
ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.[1][2][3][4]
೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇಡೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ' ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳದಲ್ಲಿ ಆ ಜಾತಿಯ ಜನ ೩೦% ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.
ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.
ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸು ಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರು.