ಮನುಸ್ಮೃತಿ
From Wikipedia, the free encyclopedia
ಮನುಸ್ಮೃತಿ ಅಥವಾ "ಮನುವಿನ ನಿಯಮಗಳು"; ಮಾನವಧರ್ಮಶಾಸ್ತ್ರ ಎಂದೂ ಪರಿಚಿತವಾಗಿದೆ.[1] ಹಿಂದೂ ಧರ್ಮದ ಧರ್ಮಶಾಸ್ತ್ರ ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಮನು ಎಂಬ ಧರ್ಮಶಾಸ್ತ್ರಕಾರ ರಚಿಸಿದ ಈ ಕೃತಿ ಹಿಂದುಗಳ ಆಚಾರ ವಿಚಾರಗಳನ್ನು ನಿರ್ಧರಿಸುತ್ತದೆ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. ಮನುವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, ಋಷಿಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ಧರ್ಮಶಾಸ್ತ್ರಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
ಯಾಜ್ಞವಲ್ಕ್ಯ, ನಾರದ, ವಿಷ್ಣು ಇತ್ಯಾದಿ ಹತ್ತಾರು ಸ್ಮೃತಿಗ್ರಂಥಗಳಿದ್ದರೂ ಅವೆಲ್ಲಕ್ಕೂ ಹೆಚ್ಚಿನ ಪ್ರಾಮಾಣ್ಯ ಈ ಸ್ಮೃತಿಗೆ ಪರಂಪರಾಗತವಾಗಿ ಪ್ರಾಪ್ತವಾಗಿದೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘ ಕಾಲಾವಧಿಯುದ್ದಕ್ಕೂ ಮನುಸ್ಮೃತಿ ಭಾರತೀಯ ಸನಾತನಧರ್ಮದ, ಜನಜೀವನದ ಆಚಾರ ವಿಚಾರಗಳ ಹಾಗೂ ಐಹಿಕ ಆಮುಷ್ಮಿಕ ನೆಲೆ ಬೆಲೆಗಳ ನಿಯಾಮಕ ಗ್ರಂಥವೆಂದು ಮನ್ನಣೆ ಪಡೆದಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿಯೇ ಯದ್ವೈ ಮನು ರವದತ್ ತದ್ ಭೇಷಜಂ ಎಂದರೆ ಮನು ಏನು ಹೇಳಿರುವನೊ ಅದೇ ಪರಮೌಷಧ ಎಂಬ ಭಾವನೆಯಿದ್ದುದನ್ನು ನೋಡುತ್ತೇವೆ. ಬೃಹಸ್ಪತಿ ತನ್ನ ಮನುಸ್ಮೃತಿಯಲ್ಲಿ ಮಹಿಮೆಯನ್ನು ಹೀಗೆ ಕೊಂಡಾಡುತ್ತಾನೆ:
ವೇದಾರ್ಥೋಪನಿಬದ್ಧತ್ವಾತ್ ಪ್ರಾಧಾನ್ಯಂ ಹಿ ಮನೋಃ ಸ್ಮೃತೇಃ ಮನ್ವರ್ಥವಿಪರೀತಾ ತು ಯಾ ಸ್ಮೃತಿಃ ಸಾ ನ ಶಸ್ಯತೇ
ವೇದಾರ್ಥವನ್ನು ಸರಿಯಾಗಿ ಒಳಗೊಂಡಿರುವುದರಿಂದಲೇ ಮನುಸ್ಮೃತಿಗೆ ಪ್ರಾಧಾನ್ಯ. ಇದರ ವಿರುದ್ಧವಾದ ಸ್ಮೃತಿವಾಕ್ಯ ಏನಿದ್ದರೂ ಅದಕ್ಕೆ ಬೆಲೆಯಿಲ್ಲ. ಪೌರಣಿಕರ ಸಂಪ್ರದಾಯದಂತೆ ಸ್ವಾಯಂಭುವ ಬ್ರಹ್ಮನ ಮಾನಸಪುತ್ರ. ಈತನೇ ಧರ್ಮ ಶಾಸ್ತ್ರಸಾರವನ್ನು ಮರೀಚೆ, ಭೃಗು ಮುಂತಾದ ಗುರು ಶಿಷ್ಯಪರಂಪರೆಯಲ್ಲಿ ಪ್ರಚಾರಕ್ಕೆ ತಂದವ. ಈಗ ಉಪಲಬ್ಧವಿರುವ ಸಂಕಲನಕ್ಕೆ ಭೃಗುಸಂಹಿತೆಯೆಂದು ಹೆಸರು. ಕಾಲದಿಂದ ಕಾಲಕ್ಕೆ ಮನುಸ್ಮೃತಿ ರೂಪಾಂತರ ತಳೆಯುತ್ತ ಹೋಗಿರಬೇಕೆಂದು ತೋರುತ್ತದೆ. ಭಾರ್ಗವೀಯ ಮನುಸಂಹಿತೆಯಂತೆ ನಾರದೀಯ ಮನುಸಂಹಿತೆಯೂ ಉಂಟು.
ಇದು ವಿಹಿತ ಧರ್ಮಗಳ ಒಂದು ಸಂಹಿತೆ ಮಾತ್ರವಲ್ಲ. ಪ್ರಾಚೀನ ಸಾಹಿತ್ಯದ ಒಂದು ಶ್ರೇಷ್ಠ ಕೃತಿ ಎನಿಸಿದೆ. ಇದರಲ್ಲಿಯ ಶ್ಲೋಕಗಳು ಅನೇಕ ಮೌಲಿಕ ವಿಚಾರಗಳನ್ನೂ ಉದಾತ್ತ ಸದ್ಗುಣಗಳನ್ನೂ ಧ್ಯೇಯ ಧೋರಣೆಗಳನ್ನೂ ನಿರೂಪಿಸುತ್ತವೆ. ಇದರಲ್ಲಿ ಸುಭಾಷಿತಗಳನ್ನೂ ನೀತಿ ವಾಕ್ಯಗಳನ್ನೂ ಗಮನಿಸದೆ ಹೋದರೆ ಇದರ ಗುಣವಿವೇಚನೆ ಅಪೂರ್ಣವಾದಂತೆ. ಅಂಥ ಕೆಲವು ಉದಾಹರಣೆಗಳು:
ಕೂದಲು ಬೆಳ್ಳಗಾದವ ಹಿರಿಯನಲ್ಲ; ವಯಸ್ಸಿನಿಂದ ಹಿರಿಯನಾದರೂ ಬಹುಶ್ರುತನಾದವನನ್ನು ದೇವತೆಗಳು ಗೌರವಿಸುತ್ತಾರೆ. ನೋವಾಗದ ರೀತಿಯಲ್ಲಿ ಜನತೆಗೆ ಹಿತವನ್ನು ಬೋಧಿಸಬೇಕು. ಪುಣ್ಯವನ್ನು ಬಯಸುವವ ಸವಿಯಾದ ನುಡಿಗಳನ್ನು ಆಡಬೇಕು: ಅವಮಾನಹೊಂದಿದವ ಸುಖವಾಗಿ ಮಲಗಿ ಸುಖವಾಗಿಯೇ ಎದ್ದು ಲೋಕದಲ್ಲಿ ಸಂಚರಿಸಬಹುದು. ಅವಮಾನಪಡಿಸಿದವ ಮಾತ್ರ ಹಾಳಾಗುತ್ತಾನೆ. ತೃಪ್ತಿಯೇ ಸುಖದ ಮೂಲ, ಅದರ ಅಭಾವವೇ ದುಃಖ, ಸ್ವಾವಲಂಬವೇ ಸುಖ. ಕಷ್ಟಸಾಧ್ಯ ಎನಿಸಿದರೂ ಅಂತರಾತ್ಮ ಮೆಚ್ಚುವುದನ್ನೇ ಮಾಡಬೇಕು. ಎಲ್ಲ ಶುದ್ಧಿಗಿಂತ ಆರ್ಥಿಕ ಶುದ್ಧಿ ಮುಖ್ಯ : ಅವನೇ ನಿರ್ಮಾಲ, ನೀರು ಮೊದಲಾದವುಗಳಿಂದ ತೊಳೆದು ಕೊಂಡವನಲ್ಲ. ಧರ್ಮವೊಂದೇ ಮರಣದ ಅನಂತರ ಬರುವ ಜೊತೆಗಾರ. ಉಳಿದವೆಲ್ಲ ದೇಹದೊಂದಿಗೆ ಮಣ್ಣಾಗುವುವು. ಮನುಷ್ಯನಿಗೆ ಆತ್ಮವೇ ಸಾಕ್ಷಿ. ಅಂಥ ಆತ್ಮವನ್ನು ಕಡೆಗಣಿಸಬಾರದು.
ಮನುವಿನ ಧರ್ಮಶಾಸ್ತ್ರದಲ್ಲಿ ಪ್ರತಿಪಾದಿತವಾಗಿರುವ ಧರ್ಮ ಶಾಶ್ವತ ಸುಖದತ್ತ ಕರೆದೊಯ್ಯುವ ಹಿರಿಯಾಸೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಮನುಸ್ಮೃತಿ ಬೈಬಲಿಗಿಂತ ಹಿರಿದಾದುದು ಎಂದು ತತ್ವ್ವಶಾಸ್ತ್ರಜ್ಞ ನೀಚೆ ಹೇಳಿದರೆ ಕೀತ್ ಹೀಗೆ ಹೇಳುತ್ತಾನೆ: ಮನುಸ್ಮೃತಿ ಒಂದು ಧರ್ಮಶಾಸ್ತ್ರವೆಂಬ ದೃಷ್ಟಿಯಿಂದ ಮಾತ್ರ ಮಹತ್ತ್ವ ಪಡೆದಿಲ್ಲ. ಜೀವನದ ಒಂದು ತತ್ತ್ವಜ್ಞಾನವನ್ನು ಅಭಿವ್ಯಕ್ತಗೊಳಿಸಿದೆ ಎಂಬ ದೃಷ್ಟಿಯಿಂದ ಅದಕ್ಕೆ ಮಹತ್ತ್ವ ಬಂದಿದೆ. ಮನುಸ್ಮೃತಿಯಲ್ಲಿ ಜನತೆಯ ಜೀವಾಳವನ್ನೇ ಕಾಣುತ್ತೇವೆ. ಬೃಹಸ್ಪತಿ ತನ್ನ ಸ್ಮೃತಿಯಲ್ಲಿ ಹೀಗೆ ಹೇಳಿದ್ದಾನೆ: ಧರ್ಮಾರ್ಥ ಬೋಧಕನಾದ ಮನು ಪ್ರವೇಶ ಮಾಡುವತನಕ ಮಾತ್ರ ಉಳಿದ ಶಾಸ್ತ್ರಗಳು ಮೆರೆದಾಡಬಹುದು.